Kolikamale ; The Unknown peak

ಇದು ಮೂರನೆಯದಾಗಿ ಬಂದ ಹೆಸರು, ಮೊದಲು ಗಡಾಯಿಕಲ್ಲು, ನಂತರ ಕಾಸರಗೋಡಿನ ರಾಣಿಪುರಂ
ಪ್ರಸ್ತಾಪವಾಗಿತ್ತು. ಜಾಗ ಯಾವುದಾದರೇನು ಮಜಾ ಮಾಡೋದರಲ್ಲಿರೋದು. ಮೂರು ಜಾಗಗಳು ಚಾರಣದ ಸ್ಥಳಗಳೇ.ಮೂರನೆಯದ್ದು ಹೊರ ಜಗತ್ತಿಗೆ ಅಷ್ಟು ತೆರೆದುಕೊಂಡಿಲ್ಲ. ಆ ಊರಿನವರಿಗೆ ಮಾತ್ರವೇ ಅದರ ಜ್ಞಾನ. ಅದಿರೋದು ನನ್ನ Friend ಮೋಕ್ಷಿತ್‌ನ ಊರಿನಲ್ಲಿ.OK,  ಜಾಗ ಪಕ್ಕಾ ಆಯ್ತು. ಯೋಜನೆಗಳು ರೂಪಿತಗೊಂಡಿದ್ದು ಮೂರು ದಿನದ ವಜ್ರಮಹೋತ್ಸವದ ಹಿಂದಿನ ದಿನ, ಏಳು ಜನರ ಪಟ್ಟಿ ಸಿದ್ಧವಾಯಿತು. ಸಂಜೆ ಪರೋಟಕ್ಕೆ ಆರ್ಡರ್ ಕೂಡ ಆಯಿತು. ಬೆಳಗ್ಗೆ ನಾನು ಮತ್ತು ಪ್ರಸಾದ Mahindra  Duro ದಲ್ಲಿ ಸುಳ್ಯ ದತ್ತ ಹೊರಟೆವು. ಸುಳ್ಯ ತಲುಪಿದ ನಾವು Duro ಅನ್ನು Bus Standನ ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿ ಅವಿನಾಶ್‌ಗೆ ಕರೆ ಮಾಡಿದಾಗ, ಸಾಯಿನಾಥ್ ಆಗಲೇ ಸುಳ್ಯಕ್ಕೆ ತಲುಪಿದ್ದು, ನಮಗಾಗಿ  Bus Standನಲ್ಲಿ ಕಾಯುತ್ತಿದ್ದಾನೆಂದು ತಿಳಿಯಿತು. ನಂತರ Bus Standನಲ್ಲಿ ಸಾಯಿನಾಥ್‌ನನ್ನು ಸಂಧಿಸಿ, ಮೂರು ಜೋಡಿ ಕುರ್ಚಿಗಳಿರುವೆಡೆಗೆ ಹೆಜ್ಜೆಹಾಕಿ ಆಸೀನರಾದೆವು. ನಂತರದ 30 ನಿಮಿಷಗಳಲ್ಲಿ ಅವಿನಾಶ್ ಬಂದ, ಕೆಲವು ನಿಮಿಷಗಳ ನಂತರ ಮೋಕ್ಷಿತ್ ತಾನು ಜೀಪಿನಲ್ಲಿ ಬಂದಿರುವುದಾಗಿ ತಿಳಿಸಿದ. ಮೋಕ್ಷಿತ್‌ನ ಜೀಪು ಹತ್ತಿದ ನಾವು ಪರಗೇಟ್ ನಲ್ಲಿರುವ ಅವರ ಬಾಡಿಗೆ ಮನೆಯಿಂದ ನೀರಿನ ಬಾಟಲಿಗಳನ್ನು ಸಿದ್ಧಪಡಿಸಿದಾಗ ಅಲ್ಲಿಗೆ ಪ್ರಜ್ವಲ್ ಮತ್ತು ಅಭಿಷೇಕ್ ಬೈಕ್‌ನಲ್ಲಿ ಬಂದರು. ನಂತರ ಗಾಂಧಿನಗರದ ಪೆಟ್ರೋಲ್ ಬಂಕ್‌ಗೆ ಡೀಸೆಲ್‌ಗಾಗಿ ತೆರಳಿ, ಕೆಲಸ ಮುಗಿಸಿದಾಗ ರಾಜೇಶ್ ಸುಳ್ಯ ಬಸ್ ನಿಲ್ದಾಣದಲ್ಲಿ ಇರುವುದಾಗಿ ಕರೆ ಬಂತು. ನಂತರ ಪುನಃ ಅದೇ ದಾರಿಯಲ್ಲಿ ಸುಳ್ಯ ನಿಲ್ದಾಣದಿಂದ ರಾಜೇಶ್‌ನನ್ನು ಹತ್ತಿಸಿಕೊಂಡು ಅದೇ ಗಾಂಧಿನಗರದಿಂದ ಹಾದು ಹೋಗುವ ರಸ್ತೆಯಲ್ಲಿ ಪೆರಾಜೆ ಯತ್ತ ಮುಖಮಾಡಿದೆವು.
ಕುಂಬಳಚೇರಿಯವರೆಗೆ ಮಾಮೂಲಿ ಚಾಲಕನಾಗಿ ಕಂಡ ಮೋಕ್ಷಿತ್ ಓರ್ವ ಅದ್ಭುತ ಚಾಲಕನಾಗಿ ಕಂಡದ್ದು ಅನಂತರದ ತಿರುವು-ಮರಳು ಮತ್ತು ಇಳಿಜಾರಿನ ರಸ್ತೆಗಳಲ್ಲಿಯೇ, ಚಾರಣದ ಯೋಜನೆಯ ಹಿಂದಿನ ದಿನದಂದು, "ಜೀಪ್" ನಿಂದ ತೆರಳುವುದರಿಂದ ಪ್ರತಿಷ್ಠೆ ಹಾಳಾಗುವುದೆಂದು ಭಾವಿಸಿ ಕಾರಿನಲ್ಲಿ ತೆರಳುವುದಾದರೆ ಮಾತ್ರ ಬರುವುದಾಗಿ ಜಂಬಕೊಚ್ಚಿಕೊಂಡ ಮುಜೀಬ್‌ನನ್ನು ನೆನೆಸಿದಾಗ, ಆತ ಏನಾದರೂ ಕಾರಿನಲ್ಲಿ ಬರುತ್ತಿದ್ದರೆ ಕೇವಲ ಬೆಟ್ಟವನ್ನಲ್ಲದೆ, ಇಳಿಜಾರಿನ ರಸ್ತೆಗಳನ್ನು ಸಹ ನಡಿಗೆಯಲ್ಲಿ ಕ್ರಮಿಸಬೇಕಾಗಿ ಬರುತಿತ್ತು ಎಂದೆನಿಸುತ್ತದೆ.
ಅಂತೂ ದುರ್ಘಮ, ಇಕ್ಕಟ್ಟಿನ ಮತ್ತು ಕಡಿದಾದ ರಸ್ತೆಗಳನ್ನು ಕ್ರಮಿಸಿ ಕೊಳಿಕ ಮಲೆಯ ಪಾದಕ್ಕೆ ತಲುಪಿದೆವು. ನಮ್ಮ ತಂಡಕ್ಕೆ ಸಲಹೆಗಾರರಾಗಿ ಸೇರಿಕೊಂಡವರು ಮೋಕ್ಷಿತ್‌ನ ಚಿಕ್ಕಪ್ಪ
ಮತ್ತು ಅವರ ಮಗ, ಅವರು ಆಗಲೇ ಎರಡು ಬಚ್ಚಂಗಾಯಿ ಖರೀದಿಸಿದ್ದರು. ಯಾವುದೇ ಚಾರಣಕ್ಕೆ ತೆರಳುವ ಅಲ್ಲಿನ ಸ್ಥಳೀಯರ ಜೊತೆ ಹೆಜ್ಜೆ ಹಾಕುವುದು, ನನಗೆ ಆ ಪ್ರದೇಶದ ಬಗ್ಗೆ ಹೆಚ್ಚಿನ ಜ್ಞಾನವನ್ನು ದೊರಕಿಸುತ್ತದೆ. ಒಟ್ಟು ನಮ್ಮ ತಂಡದಲ್ಲೀಗ 10 ಜನ. 
ಉಪಹಾರಕ್ಕಾಗಿ ಸುಳ್ಯದಿಂದ 35 ಪರೋಟ ಮತ್ತು ಕೋಳಿ 
ಸಾರು ಖರೀದಿಸಿದ್ದೆವು. ಮೋಕ್ಷಿತ್‌ನ ಚಿಕ್ಕಪ್ಪನ 
ಮುಂದಾಳತ್ವದಲ್ಲಿ ನಮ್ಮ ತಂಡವು ಜೀಪಿನಿಂದ ಇಳಿದು 
ಉಪಹಾರದ ಗಂಟು ಮತ್ತು ನೀರಿನ ಬಾಟಲಿಗಳನ್ನು 
ಹೊತ್ತುಕೊಂಡು ಚಾರಣ ಪ್ರಾರಂಭಿಸಿತು.
ಅದು ಇಳಿಜಾರಿನ 
ಕಾಡು. ನಮ್ಮ ವಿಜ್ಞಾನದ ನೋಟದಲ್ಲಿ ಹೇಳುವುದಾದರೆ " tan 45° ".
ಒಣ ಎಲೆಗಳ ಮೇಲೆ ಕಾಲಿಟ್ಟಂತೆಯೇ ಜಾರುತ್ತಿತ್ತು.
ಅಲ್ಲಲ್ಲಿ 
ಕಾಡು ಕೋಳಿ ಅಗೆದ ಗುರುತುಗಳು, ಆನೆಯ ಹೆಜ್ಜೆಗಳು 
ಕಾಡುಕೋಣದ ಸೆಗಣಿ, ನಮ್ಮ ಆಯಾಸದ ಪ್ರಮಾಣ ಮತ್ತು 
ಸುಸ್ತು ಎಷ್ಟಿತ್ತೆಂದರೆ ಗುರಿ ತಲುಪಿದ ನಂತರ ತಿನ್ನಬೇಕಿದ್ದ 
ಎರಡು ಬಚ್ಚಂಗಾಯಿಗಳು ಅರ್ಧದಾರಿಯಲ್ಲೇ ನಮ್ಮ 
ಹೊಟ್ಟೆಯ ಪಾಲಾದವು. ಬಚ್ಚಂಗಾಯಿಯ ಸಿಪ್ಪೆಗಳನ್ನು 
ಮೋಕ್ಷಿತ್‌ನ ಚಿಕ್ಕಪ್ಪನ ಸಲಹೆಯಂತೆ ಎಲ್ಲೆಂದರಲ್ಲಿ ಎಸೆಯುವ ಬದಲು ಹಿಂತಿರುಗುವಾಗ ದನಗಳಿಗೆ ಒಯ್ಯಬಹುದೆಂದು 
ಅಲ್ಲೇ ಲಕೋಟೆಯಲ್ಲಿ ತುಂಬಿಸಿ ಮರದ ಬುಡದಲ್ಲಿಟ್ಟೆವು. 
ನಂತರದ ಅರ್ಧ ದಾರಿ ಶುರುವಾದದ್ದು ಎಲೆ ಅಡಿಕೆಯ 
ಜೊತೆಯಲ್ಲಿ.
ನಮ್ಮ ದಾರಿಯಲ್ಲಿ ೪ ಜನ ತಬ್ಬಿ ಹಿಡಿಯಬಲ್ಲ 
ಮರವೊಂದು ನಮ್ಮನ್ನು ಅಚ್ಚರಿಗೊಳಿಸಿತು.
ಉಳಿದ 
ಮರಗಳೇನೂ ಕಮ್ಮಿ ಇಲ್ಲ, ಎಲ್ಲಿ ನೋಡಿದರೂ ಗಗನ 
ಚುಂಬಿ ಮರಗಳು. ಕಾಡು ಪ್ರಾಣಿಗಳಿದ್ದರೆ ದೂರ 
ಹೋಗಲೆಂದು ನಾವು ಬೊಬ್ಬಿಡುತ್ತಾ ನಡೆದೆವು. ಕಾಡು 
ಅಂದರೆ ಹಾಗೇನೇ ಎತ್ತ ನೋಡಿದರೂ ವಿಸ್ಮಯ. ಕಾಡಿನಲ್ಲಿ ಪೋಟೋ ಕ್ಲಿಕ್ಕಿಸಲು ಯಾವುದೇ ಹಿನ್ನಲೆ ದೃಶ್ಯವನ್ನು 
ಆರಿಸುವ ಅಗತ್ಯವಿಲ್ಲ. ಎಲ್ಲವೂ ಅದ್ಭುತ.
ಇನ್ನು ಫೋಟೋ 
ಕ್ಲಿಕ್ಕಿಸಿ status ಹಾಕುವವರ ಪಾಡು ಕೇಳಬೇಕೇ? ಕಂಡ ಕಂಡ 
ಬಂಡೆಯಲ್ಲಿ,
ಮರದ ಪೊಟರೆಗಳ ಮುಂದೆ ಫೋಟೋ 
ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಸಾಯಿನಾಥ್ ಕ್ಯಾಮರಾವೊಂದನ್ನು ತನ್ನ 
ವಸತಿ ನಿಲಯದ ಸಹಪಾಠಿಯಿಂದ ಎರವಲು ಪಡೆದಿದ್ದ. ಈ 
ಹುಚ್ಚು ನಮ್ಮನ್ನು ಗುರಿ ತಲುಪಿಸುವಲ್ಲಿ ಕೊಂಚ ತಡವಾಗಿಸಿತು ಎಂದರೆ ತಪ್ಪಾಗಲಾರದು. 
 ಅಂತೂ ಕಾಡುದಾರಿ ಮುಗಿಯಿತು. ಬೆಟ್ಟದ ತುದಿಯ 
ಹುಲ್ಲುಗಾವಲಿಗೆ ತಲುಪಿದೆವು.
ಅಲ್ಲಿಂದಲೂ ತುತ್ತ ತುದಿಗೆ 
ಮತ್ತೂ ಒಂದು ಕಿ.ಮೀ. ಇತ್ತು.
ಅಲ್ಲೇ ಒಂದು ಮರದ 
ಕೆಳಗೆ ಒಂದು ಪೋಟೋ ಕ್ಲಿಕ್ಕಿಸಿದೆವು. ನಂತರ ಪುನಃ ನಡಿಗೆ 
ಮುಂದುವರೆಯಿತು.
ನಡಿಗೆಯ ಬೆವರು ನಮ್ಮನ್ನು ಎಷ್ಟು 
ಕಾಡಿತ್ತೆಂದರೆ ಅಂಗಿಯನ್ನು ಬಿಚ್ಚಿ ಸೊಂಟಕ್ಕೆ ಪಟ್ಟಿಯಂತೆ 
ಕಟ್ಟಿಕೊಂಡೆವು. ಮೋಕ್ಷಿತ್ ಮತ್ತು ಆತನ ಚಿಕ್ಕಪ್ಪರಿಗೆ ಸ್ಥಳ 
ಚಿರಪರಿಚಿತವಾದರೂ ಮೊದಲು ಗುರಿ ತಲುಪಿದ್ದು ನಾನು. 
ನಂತರ ಉಪಹಾರದ ಪೊಟ್ಟಣ ಬಿಚ್ಚಿದೆವು.
ಪ್ರತಿಯೊಬ್ಬರಿಗೂ 
ಬೇಕಾದಷ್ಟು ಪರೋಟ ಮತ್ತು ಅರ್ಧ ಲೋಟ ಸಾರು
ಕೋಳಿಕಮಲೆಯು ಹತ್ತು ಬೆಟ್ಟಗಳನ್ನು ಒಳಗೊಂಡಿದೆ 
ಎಂದೆನ್ನುತ್ತಾರೆ. ಮೋಕ್ಷಿತ್‌ನ ಚಿಕ್ಕಪ್ಪನ ಜೊತೆ ಉಪಹಾರ ಮುಗಿಸಿ ಮುಂದಿನ ಬೆಟ್ಟಗಳತ್ತ ಹೆಜ್ಜೆ ಹಾಕಿದೆವು. ಏನೋ 
ಪುಣ್ಯವೋ ಎಂಬಂತೆ ಮೋಡವು ಸೂರ್ಯನ ಕಿರಣಗಳು 
ನಮ್ಮ ಮೇಲೆ ಬೀಳದಂತೆ ಕೊಡೆಹಿಡಿದಿತ್ತು.
ಹತ್ತೂ ಬೆಟ್ಟಗಳು ಒಂದೇ ಜಾಗಕ್ಕೆ ನಿಂತು ನೋಡಿದರೆ 
ಕಾಣಿಸುವುದಿಲ್ಲ.
ಎರಡನೇ ಬೆಟ್ಟ ಹತ್ತಿದರೆ ಮೂರನೇ ಮತ್ತು 
ಮೂರನೇ ಬೆಟ್ಟ ಹತ್ತಿದರೆ ಮಾತ್ರವೇ ನಾಲ್ಕನೆಯ ಬೆಟ್ಟ 
ಕಾಣಿಸುವಂತೆ ಪ್ರಕೃತಿಯ ವಿಸ್ಮಯವನ್ನು ರೂಪಿಸಿತ್ತು. ನಾನು 
ಮತ್ತು ಪ್ರಸಾದ ಮುನ್ನುಗ್ಗುತ್ತಿದ್ದರೆ, ಉಳಿದವರು ಫೋಟೋ 
ಕ್ಲಿಕ್ಕಿಸುವುದರಲ್ಲೇ ನಿಂತುಬಿಡುತ್ತಿದ್ದರು. ನಾವಿಬ್ಬರು ನಾಲ್ಕನೇ 
ಬೆಟ್ಟ ಕಳೆದು ಐದನೇ ಬೆಟ್ಟದ ಕಡೆಗೆ ನಡೆಯುತ್ತಿದ್ದೆವು. 
ದಾರಿಯುದ್ದಕ್ಕೂ ದಟ್ಟ ಹುಲ್ಲುಗಾವಲು. 
ಒಂದರಿಂದ ಮೂರನೇಯ ಬೆಟ್ಟದವರೆಗಿನ ಹುಲ್ಲನ್ನು ಅರಣ್ಯ 
ಇಲಾಖೆಯವರು ಕಿಚ್ಚು ಹೊತ್ತಿಸಿ ಸುಟ್ಟು ಹಾಕಿದ್ದರು.
ಬಹುಶಃ 
ಅವರು ಹೀಗೆ ಕಿಚ್ಚು ಹೊತ್ತಿಸುವುದು ಸಸ್ಯಾಹಾರಿ 
ಕಾಡುಪ್ರಾಣಿಗಳ ಹುಲ್ಲಿನ ಕೊರತೆ ನೀಗಿಸಲಿರಬೇಕು. ಅದು 
ಹೇಗೆಂದರೆ ಉದ್ದನೆಯ ಹುಲ್ಲನ್ನು ಸುಟ್ಟ ಮೇಲೆ ಮತ್ತೆ 
ಅದರ ಬುಡದಿಂದ ಸೊಂಪಾದ ಹುಲ್ಲು ಚಿಗುರೊಡೆಯುತ್ತದೆ. 
ಇದು ಕಡವೆ, ಕಾಡುಕೋಣ ಮುಂತಾದ ಪ್ರಾಣಿಗಳಿಗೆ 
ವರದಾನವಾಗುವುದಂತು ಸತ್ಯ. ನಾವು ನಾಲ್ಕನೇಯ ಬೆಟ್ಟದಿಂದ ಐದನೇಯ ಬೆಟ್ಟದ ಕಡೆಗೆ ಹೆಜ್ಜೆಹಾಕುವಾಗ ದಾರಿ 
ಮಧ್ಯದಲ್ಲಿ ಅದೇನೋ ಕೆಟ್ಟ ವಾಸನೆ ಮೂಗು ಹತ್ತಿತು. 
ಅದು ಯಾವುದೋ ಸಸ್ಯವಿರಬಹುದು, ಅಥವಾ ಯಾವುದೋ 
ಕಾಡುಪ್ರಾಣಿಗಳ ಮಲ-ಮೂತ್ರವೋ ಗೊತ್ತಿಲ್ಲ. ಕೊಂಚ 
ಸಮಯ ಸ್ಥಬ್ಧವಾಗಿ ಕಿವಿ ನೆಟ್ಟಗಾಗಿಸಿದೆವು. ಯಾವುದೇ 
ಶಬ್ಧವಿಲ್ಲವೆಂದು ಖಚಿತಪಡಿಸಿ ಐದನೇ ಬೆಟ್ಟದ ತುದಿಗೆ 
ತಲುಪಿದ ನಂತರ ಆರನೇಯ ಬೆಟ್ಟದ ತಪ್ಪಲು ಕಾಣಿಸಿತು.
ಇದೊಂದು ವಿಸ್ಮಯವೇ ಸರಿ. ನಾಲ್ಕನೇಯ ಬೆಟ್ಟದಿಂದ 
ಕಣ್ಣಾಡಿಸಿದಾಗ 
ಐದನೇಯ ಬೆಟ್ಟವೇ ಕೊನೇಯ ಬೆಟ್ಟವೆಂದು 
ಭಾಸವಾಗುತ್ತದೆ. ಆದರೆ ವಸ್ತುಸ್ಥಿತಿ ಹಾಗಿರುವುದಿಲ್ಲ, ನಾವು 
ಮುಂದೆ ಮುಂದೆ ಹೆಜ್ಜೆ ಹಾಕಿದಂತೆಲ್ಲಾ ಬೆಟ್ಟಗಳ ಸಂಖ್ಯೆ 
ಹೆಚ್ಚಾಗುತ್ತಾ ಹೋಗುತ್ತದೆ. ಮೋಕ್ಷಿತ್‌ನ ಚಿಕ್ಕಪ್ಪ ಹೇಳುವ ಪ್ರಕಾರ ಈ ಬೆಟ್ಟವು ಕಾವೇರಮ್ಮನ ಪವಿತ್ರ ಬೆಟ್ಟವಾಗಿದೆ. 
ಇಲ್ಲಿ ಕಾವೇರಮ್ಮನಿಗೆ ಗುಡಿ ಕಟ್ಟಿಸಬೇಕಿತ್ತು ಎಂದರು.
 ನಮಗೆ ಕಾಡುಪ್ರಾಣಿಗಳು ಕಾಣಸಿಗದಿದ್ದರೂ ಅಪರೂಪ 
ಬಣ್ಣ ಬಣ್ಣದ ಹಕ್ಕಿಗಳು ಕಾಣಸಿಕ್ಕವು. ಮೋಕ್ಷಿತ್ ಒಮ್ಮೆ 
ಮಿಂಚುಳ್ಳಿ ಹಕ್ಕಿಯೆಂದು ಕೈ ತೋರಿಸಿದ, ಆದರೆ ಅದು 
ಅಸಲಿಗೆ ಯಾರೋ ಕಟ್ಟಿದ ನೀಲಿ ಬಟ್ಟೆಯಾಗಿತ್ತು. ನಾವು 
ಬಳಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಅಲ್ಲೇ ಉಳಿಸದೆ, ಪುನಃ 
ಊರಿಗೆ ತಂದೆವು. 
 ನಂತರ ಗುಂಪು ಫೋಟೋ ಕ್ಲಿಕ್ಕಿಸಿ ಮಲೆ ಇಳಿದೆವು. 
ಇಳಿಯುವುದಂತೂ ಇನ್ನೂ ಅಪಾಯಕಾರಿ ಒಣಎಲೆಗಳ ಮೇಲೆ 
ಕಾಲಿಟ್ಟರೆ ದೊಪ್ಪನೆ ಜಾರಿಬಿಡುತ್ತಿದ್ದೆವು. ಮರಗಳನ್ನು ಹಿಡಿದು 
ಹಿಡಿದು ಇಳಿಯಬೇಕಾಯಿತು! ದಾರಿ ಮಧ್ಯದಲ್ಲಿ ಹತ್ತುವಾಗ 
ತೆಗೆದಿಟ್ಟಿದ್ದ ಬಚ್ಚಂಗಾಯಿಯ ಸಿಪ್ಪೆ ಹಿಡಿದುಕೊಂಡು, 
ಕಾಡಿನಿಂದ ನಾಡಿನ ಸರಹದ್ದಿಗೆ ಬಂದು, ಜೀಪು ಹತ್ತಿ 
ಮೋಕ್ಷಿತ್‌ನ ಮನೆಗೆ ಹೊರಟೆವು. ದಾರಿಯಲ್ಲಿ ಸೇತುವೆ ನಿರ್ಮಾಣವಾಗುವುತ್ತಿದ್ದರಿಂದ ಜೀಪನ್ನು ನಿಲ್ಲಿಸಿ ಅರ್ಧ ಕಿಲೋಮೀಟರ್ ನಡೆದೆವು. ತೋಟದ ಮಧ್ಯದ ರಸ್ತೆಯಲ್ಲಿ 
ನಡೆಯುವಾಗ ಕೆರೆಯೊಂದು ಕಂಡು ಅದಕ್ಕೆ ಹಾರೋಣ 
ಎಂದೆನೆಸಿತು. ಮೈಯೆಲ್ಲಾ ಸುಸ್ತು, ಮತ್ತೆ ಹತ್ತಿದ್ದೇ 
ಮೋಕ್ಷಿತ್‌ನ ಮನೆಯ ಅಂಗಳಕ್ಕೆ.
ಕಾಳುಮೆಣಸು 
ಒಣಹಾಕಿದ್ದರೆ, ಸ್ವಲ್ಪ ಅಡಿಕೆ, ಮೂರು ಊರಿನ ನಾಯಿಗಳು, 
ಹೊಸ ಮನೆಯ ಕೆಲಸ ಆರಂಭವಾಗಿ ಬುನಾದಿ 
ಪೂರ್ತಿಗೊಂಡಿದೆ. ಮೋಕ್ಷಿತ್ ನಮ್ಮೆಲ್ಲರನ್ನೂ ತನ್ನ ತಂದೆ 
ತಾಯಿಗೆ ಪರಿಚಯಿಸಿದ. ನಾವೆಲ್ಲರೂ ಮನೆಯ ಚಿಟ್ಟೆಯಲ್ಲಿ 
ಕುಳಿತೆವು. ಅಮ್ಮ ಚಹಾ ತಂದರು. ನಾನು ಮತ್ತು ಪ್ರಜ್ವಲ್ 
ಚಹಾ ಕುಡಿಯುವುದಿಲ್ಲವಾದುದರಿಂದ ಎರಡು ಚಹಾ 
ಬದಲಾಯಿಸಿ ಜ್ಯೂಸ್ ತಂದುಕೊಟ್ಟರು. ಮೋಕ್ಷಿತ್, ಮನೆಯ 
ಕೋವಿಯನ್ನು ನಮಗೆ ಪರಿಚಯಿಸಿದ. ಮತ್ತೆ ಕೇಳಬೇಕೇ?, 
ಒಬ್ಬೊಬ್ಬರದ್ದೇ ಕೋವಿ ಹಿಡಿದ ಸಾಲು ಸಾಲು ಫೋಟೋ 
ಕ್ಲಿಕ್ಕಿಸಲಾಯಿತು. ನಂತರ ಮೋಕ್ಷಿತ್‌ನ ತಂದೆ ಕೋವಿಯ ಬಗ್ಗೆ 
ಸಾಮಾನ್ಯ ಮಾಹಿತಿ ನೀಡಿದರು.
ಮೋಕ್ಷಿತ್ 
ಕುಟುಂಬದೊಂದಿಗೆ ಫೋಟೋ ಕ್ಲಿಕ್ಕಿಸಿ ಸುಳ್ಯದತ್ತ 
ಮುಖಮಾಡಿದೆವು. ಕೆಲವರು ಕಾಲೇಜಿಗೆ ಹೋಗೊವವರಿದ್ದರು. 
ಮಿಕ್ಕವರೆಲ್ಲಾ ಅವರವರ ಊರಿನ ಬಸ್ ಹಿಡಿದರೆ, ನಾನು 
ಮತ್ತು ಪ್ರಸಾದ ಪೆಟ್ರೋಲ್ ಬಂಕ್‌ನತ್ತ ಹೆಜ್ಜೆಹಾಕಿದೆವು.
Adventurists :










Avinash Yadav 













Prasada Gowda Kalanja












Prajwal Gowda Shekamale










Mokshith Gowda Peraje














Rajesh Naik Kinningar










Abhishek Borkar 















Sainath Shreeny Narayan

and Me.

Comments

Post a Comment

Popular posts from this blog

Monsoon Treasure

Those Days of Birth Days

OPEN HEART